ಬಸವರಾಜ ಕಟ್ಟೀಮನಿಯವರು ೧೯೧೯ ಅಕ್ಟೋಬರ ೫ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಲಾಮರಡಿ ಎನ್ನುವ ಹಳ್ಳಿಯಲ್ಲಿ ಜನಿಸಿದರು. ತಾಯಿ ಬಾಳವ್ವ; ತಂದೆ ಅಪ್ಪಣ್ಣ. ತಂದೆ ಮೊದಲಲ್ಲಿ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಿಪಾಯಿಯಾಗಿದ್ದವರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ರಾಜೀನಾಮೆ ಕೊಟ್ಟು ಹೊರಬಂದರು. ಕೆಲ ಕಾಲದ ನಂತರ ರೇಲ್ವೆ ಇಲಾಖೆಯಲ್ಲಿ ಸೇರಿಕೊಂಡರು. ಅವರು ೧೯೮೯ರಲ್ಲಿ ತೀರಿಕೊಂಡರು. ತಾಯಿಯೇ ಕೂಲಿನಾಲಿ ಮಾಡಿ ತನ್ನ ೪ ಮಕ್ಕಳನ್ನಲ್ಲದೆ ತನ್ನ ಅಣ್ಣನ ಮಗಳನ್ನೂ ಸಹ ಬೆಳೆಯಿಸಿದಳು. == ಶಿಕ್ಷಣ == ಕಟ್ಟೀಮನಿಯವರ ಪ್ರಾಥಮಿಕ ಶಿಕ್ಷಣ ಎರಡನೆಯ ತರಗತಿಯ ವರೆಗೆ ಚೆನ್ನಮ್ಮನ ಕಿತ್ತೂರಿನಲ್ಲಿ ಸಾಗಿತು. ಆಬಳಿಕ ಗೋಕಾಕಕ್ಕೆ ವರ್ಗಾವಣೆಯಾದ ತಂದೆಯೊಂದಿಗೆ ಅಲ್ಲಿಗೆ ತೆರಳಿದ ಇವರು ೩ನೆಯ ತರಗತಿ ಸೇರಿಕೊಂಡರು. ಇದ್ದಕ್ಕಿದ್ದಂತೆ ಅವರ ಕಿವಿಗಳು ಮಂದವಾದವು. ಆದರೂ ಸಹ ತಮ್ಮ ತೀಕ್ಷ್ಣ ಗ್ರಹಣ ಶಕ್ತಿ ಹಾಗು ಜ್ಞಾಪಕ ಶಕ್ತಿಗಳ ಸಹಾಯದಿಂದ ಅವರು ಪರೀಕ್ಷೆಗಳಲ್ಲಿ ಮೊದಲ ಸ್ಥಾನ ಗಳಿಸುತ್ತ ಬಂದರು.ಆಬಳಿಕ ಬೆಳಗಾವಿಯ ಶೆಟ್ಟರ ಬಿದಿಯಲ್ಲಿಯ ೨ನೆಯ ನಂಬರಿನ ಕನ್ನಡ ಶಾಲೆಯಲ್ಲಿ ಕಲಿಯತೊಡಗಿದರು. ಇದೇ ಶಾಲೆಯಿಂದ ಮುಲ್ಕಿ ಪರೀಕ್ಷೆಗೆ ಕುಳಿತು ಇಡೀ ಜಿಲ್ಲೆಗೆ ೪ನೆಯ ಸ್ಥಾನ ಪಡೆದರು. ಆನಂತರ ಬೆಳಗಾವಿಯ ಗಿಲಗಂಚಿ ಅರಟಾಳ ಹೈಸ್ಕೂಲನ್ನು ಸೇರಿಕೊಂಡರು. ಪುಣೆಗೆ ವರ್ಗಾವಣೆಗೊಂಡ ತಂದೆಯೊಂದಿಗೆ ಅಲ್ಲಿ ತೆರಳಿ ಮರಾಠಿ ಶಾಲೆಯಲ್ಲಿ ಕಲಿಯಬೇಕಾಯಿತು. ಕೆಲಕಾಲದ ನಂತರ ಅವರೊಬ್ಬರೆ ಬೆಳಗಾವಿಗೆ ಮರಳಿ, ಪುನ: ಗಿಲಗಂಚಿ ಅರಟಾಳ ಹೈಸ್ಕೂಲನ್ನು ಸೇರಿಕೊಂಡರು. ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಕಟ್ಟೀಮನಿಯವರು ಗಣಿತ ವಿಷಯ ಒಂದರಲ್ಲಿ ನಪಾಸಾಗಿದ್ದರಿಂದ ವಿದ್ಯಾಭ್ಯಾಸವನ್ನು ಅಲ್ಲಿಗೆ ಕೈಬಿಡಬೇಕಾಯಿತು. == ಉದ್ಯೋಗ == ಕಟ್ಟೀಮನಿಯವರು ೧೯೩೬ರಲ್ಲಿ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕೆಲಸಗಾರರಾಗಿ ಸೇರಿಕೊಂಡರು. ಕೆಲ ಸಮಯದ ನಂತರ ಕಟ್ಟೀಮನಿಯವರು ಹುಬ್ಬಳ್ಳಿಯ ತರುಣ ಕರ್ನಾಟಕ ಪತ್ರಿಕೆಯಲ್ಲಿ ಸೇರಿದರು. ದಿವಾಕರ ರಂಗನಾಥರೊಡನೆ ಅವರು ನಡೆಸಿದ ಸಂದರ್ಶನ ಈ ಪತ್ರಿಕೆಯಲ್ಲಿ ಪ್ರಕಟವಾದಾಗ ದೊಡ್ಡ ಕೋಲಾಹಲವೆ ನಡೆಯಿತು. ಹೀಗಾಗಿ ಈ ಪತ್ರಿಕೆಯನ್ನೂ ಬಿಟ್ಟು ಕಟ್ಟೀಮನಿಯವರು ಧಾರವಾಡದ ಭಾಲಚಂದ್ರ ಘಾಣೇಕರ ಅವರ ಸಮಾಜ ಪತ್ರಿಕೆಯ ಪೂರ್ತಿ ಹೊಣೆ ಹೊತ್ತರು. ಸಮಾಜದ ಮಾಲಿಕತ್ವ ಬದಲಾದಾಗ ಕಟ್ಟೀಮನಿಯವರು ಈ ಕೆಲಸವನ್ನೂ ಬಿಟ್ಟು, ೧೯೩೭ರಲ್ಲಿ ಹುಬ್ಬಳ್ಳಿಯಿಂದ ಪುರಾಣಿಕ ಎನ್ನುವವರು ನಡೆಯಿಸುತ್ತಿದ್ದ ಲೋಕಮತದಲ್ಲಿ ಕೆಲ ಕಾಲ ಕೆಲಸ ಮಾಡಿದರು. ಅಲ್ಲಿಂದ ಗದಗಿನ ಕರ್ನಾಟಕ ಬಂಧು ಪತ್ರಿಕೆಯನ್ನು ಸೇರಿಕೊಂಡರು. ಕಟ್ಟೀಮನಿಯವರು ೩ ವರ್ಷ ಅಲ್ಲಿ ದುಡಿದು, ಬೆಂಗಳೂರಿಗೆ ತೆರಳಿ ಸ್ವತಂತ್ರ ಕರ್ನಾಟಕ ಪತ್ರಿಕೆಯನ್ನು ಸೇರಿದರು. ಕೆಲ ಸಮಯದ ನಂತರ ಪುನ: ಧಾರವಾಡದ ಸಮಾಜಕ್ಕೆ ಮರಳಿದರು. ಈ ನಡುವೆ ಸ್ವಾತಂತ್ರ್ಯ ಚಳುವಳಿಯ ಚಟುವಟಿಕೆಗಳಿಗಾಗಿ ೬ ತಿಂಗಳುಗಳನ್ನು ಹಿಂಡಲಗಿ ಸೆರೆಮನೆಯಲ್ಲಿ ಕಳೆದು ಬಂದ ಕಟ್ಟೀಮನಿಯವರು ೧೯೪೩ರಲ್ಲಿ ಬೆಂಗಳೂರಿನ ಉಷಾ ಪತ್ರಿಕೆಯ ಸಂಪಾದಕರಾದರು. ಅಲ್ಲಿಂದ ೧೯೪೬ರಲ್ಲಿ ದಾವಣಗೆರೆಯಲ್ಲಿ ಸ್ವತಂತ್ರ ಪತ್ರಿಕೆಯ ಸಂಪಾದಕತ್ವ ವಹಿಸಿದರು. ೧೯೪೮ ಡಿಸೆಂಬರದಲ್ಲಿ ಅಲ್ಲಿಂದ ಹೊರಬಿದ್ದು ಧಾರವಾಡಕ್ಕೆ ಮರಳಿ, ಮತ್ತೊಮ್ಮೆ ಜಠಾರರ ಸಮಾಜ ಪತ್ರಿಕೆಯನ್ನು ಪ್ರಾರಂಭಿಸಿದರು. ೧೯೫೦ರಲ್ಲಿ ಈ ಪತ್ರಿಕೆಯನ್ನು ಮತ್ತೊಮ್ಮೆ ಬಿಟ್ಟು ಪೂರ್ಣಾವಧಿ ಕಾದಂಬರಿಕಾರರಾದರು. == ಸಾಹಿತ್ಯ == ಕಟ್ಟೀಮನಿಯವರು ಬದುಕಿನಲ್ಲಿ ಕ್ರಾಂತಿಕಾರಿಯಾಗಿದ್ದಂತೆಯೇ ಸಾಹಿತ್ಯದಲ್ಲೂ ಕ್ರಾಂತಿಕಾರಿ ಲೇಖಕರಾಗಿದ್ದರು. ಇವರ ಮೊದಲ ಕಥೆ "ಕಾರವಾನ್", ೧೯೪೩ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಬಿದ್ದ ಭೀಕರ ಬರಗಾಲದಿಂದ ತತ್ತರಿಸಿ ಗುಳೇ ಹೋದ ಜನರ ಕತೆಯಾಗಿತ್ತು. ೧೯೪೫ರಲ್ಲಿ “ ಕಾರವಾನ್ ” ಹೆಸರಿನಲ್ಲಿ ಅವರ ಕಥಾಸಂಕಲನ ಪ್ರಕಟವಾಯಿತು. ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆಬಳಿಕ ಅವರು ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಶೋಷಣೆಯ ವಿರುದ್ಧ—ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ. ರಾಜಕಾರಣಿಗಳನ್ನು, ಜಗದ್ಗುರುಗಳನ್ನು ಇವೆಲ್ಲರನ್ನೂ ಬತ್ತಲಾಗಿಸಿದ್ದಾರೆ. == ರಾಜಕೀಯ == ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷದ ಬಗೆಗೆ ಭ್ರಮನಿರಸನರಾದ ಕಟ್ಟೀಮನಿ ರೈತ-ಕೂಲಿಕಾರರ ಪಕ್ಷವನ್ನು ಸಂಘಟಿಸಿದರು. ಆದರೆ ರಾಜಕೀಯ ಚದುರಂಗದಾಟಕ್ಕೆ ಬೇಸತ್ತು ಅದನ್ನು ತ್ಯಜಿಸಿದರು. == ಪುರಸ್ಕಾರ == ೧೯೬೮ರಿಂದ ೧೯೭೪ರ ಅವಧಿಗೆ ಕಟ್ಟೀಮನಿಯವರು ಕರ್ನಾಟಕದ ವಿಧಾನ ಪರಿಷತ್ತಿಗೆ ನಾಮಕರಣಗೊಂಡರು. ೧೯೬೯ರಿಂದ ೧೯೭೨ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಸದಸ್ಯರಾಗಿದ್ದರು. ೧೯೬೮ರಲ್ಲಿ ಅವರ ಜ್ವಾಲಾಮುಖಿಯ ಮೇಲೆ ಕಾದಂಬರಿಗೆ ಸೋವಿಯೆಟ್ ದೇಶದ ನೆಹರೂ ಪ್ರಶಸ್ತಿ ಬಂದಿತು. ೧೯೮೦ರಲ್ಲಿ ಬೆಳಗಾವಿಯಲ್ಲಿ ನಡೆದ ೫೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. == ನಿಧನ == ೧೯೮೯ ಅಕ್ಟೋಬರ ೨೩ರಂದು ಬಸವರಾಜ ಕಟ್ಟೀಮನಿಯವರು ಧಾರವಾಡದಲ್ಲಿ ತಾವು ಕಟ್ಟಿಸಿಕೊಂಡ ಮನೆ "ಸಾಹಿತ್ಯಶ್ರೀ"ಯಲ್ಲಿ ನಿಧನರಾದರು. == ವ್ಯಕ್ತಿತ್ವ == ಕಟ್ಟೀಮನಿಯವರ ಆಪ್ತ ಮಿತ್ರ ಎಂ. ಅಕಬರ ಅಲಿ ಅವರು ಇವರ ಬಗೆಗೆ ಬರೆದ ಮಿನಿಗವನವೊಂದು ಇವರ ವ್ಯಕ್ತಿತ್ವವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ. “ ಕೆಚ್ಚು, ಕಲಿತನದ ಮತಿ ಬಿಚ್ಚುಮಗ್ಗಿ ಮಾತು-ಕಥಿ ಸಾಧುವಿಗೆ ಸಾಧು ಬಗೆ ಬಾಧಿಪಗೆ ಬಿಚ್ಚುಗತ್ತಿ” == ಕೃತಿಗಳು == === ಸಂಪಾದನೆ === ಹಾಲ ತೊರೆಗೆ ಬೆಲ್ಲದ ಕೆಸರು ಗೋಕಾಕ ತಾಲೂಕಿನಲ್ಲಿಯ ಸ್ವಾತಂತ್ರ್ಯ ಸಮರ (ಶಿವಲಿಂಗಪ್ಪ ಭಾವಿಕಟ್ಟಿಯವರ ಜೊತೆಗೆ) ರಸಿಕ ರಂಗದರ್ಶನ ( ಮಾಧವ ಮಹಿಷಿಯವರ ಜೊತೆಗೆ) ನವಿಲೂರು ಮನೆಯಿಮ್ದ (ಚೆನ್ನವೀರ ಕಣವಿಯವರ ಜೊತೆಗೆ) === ಆತ್ಮಕಥೆ === ಕಾದಂಬರಿಕಾರನ ಬದುಕು. == ಉಲ್ಲೇಖಗಳು ==